ಕರಾವಳಿ ಪ್ರದೇಶ ಶಾಂತಿ ಸಾಮರಸ್ಯಕ್ಕೆ ಹಿಂದಿನಿಂದಲೂ ಹೆಸರುವಾಸಿಯಾದ ಪ್ರದೇಶ.
ವಿವಿಧ ಧರ್ಮ, ಜಾತಿ, ಪಂಥ ದವರು ಇಲ್ಲಿ ವಿಭಿನ್ನ ಸಿದ್ಧಾಂತಗಳನ್ನು ಅನುಸರಿಸಿಕೊಂಡೇ ಭಾವೈಕ್ಯತೆಯೊಂದಿಗೆ ಸಹಬಾಳ್ವೆ ನಡೆಸಿ ಮಾದರಿಯಾಗಿದ್ದಾರೆ.
ಅಲ್ಲಲ್ಲಿ ನಡೆದ ಕೆಲವು ಅಹಿತಕರ ಘಟನೆಗಳು ಸ್ವಸ್ಥ ಸಮಾಜಕ್ಕೆ ಸವಾಲಾದರೂ ಅವೆಲ್ಲವನ್ನೂ ವಿವಿಧ ಸಮಾಜ ಬಾಂಧವರು ಪರಸ್ಪರ ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಿದ ಇತಿಹಾಸವೇ ಇಲ್ಲಿರುವುದು.
ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಡೆದ ದ್ವೇಷದ ಕೊಲೆಗಳು ಸಮಾಜವನ್ನು ತಲ್ಲಣ,ಧಿಗ್ಭ್ರಮೆಗೊಳಿಸಿದ್ದು ನಿಜ.
ಆದರೆ ಯಾವತ್ತೂ ಇದು ಹಿಂದು ಮುಸ್ಲಿಂ ಗಲಭೆ ಎಂಬ ವಿಳಾಸದಲ್ಲಿ ಇರಲೇ ಇಲ್ಲ.
ರಾಜಕೀಯ ಲಾಭಕ್ಕಾಗಿ ಉಭಯ ಸಮುದಾಯಗಳ ನಡುವಿನ ಸಹಿಷ್ಣುತೆ ಬಯಸದ ಕೆಲವು ಗುಂಪುಗಳು ಬೆಂಕಿಗೆ ತುಪ್ಪ ಸುರಿದದ್ದು ಬಿಟ್ಟರೆ ಇಲ್ಲಿ ಹಿಂದೂ ಮುಸ್ಲಿಂ ಅಂತ ಕಚ್ಚಾಟ ಇರಲೇ ಇಲ್ಲ.
ವಾಸ್ತವದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಅಂತ ಯಾವುದೇ ಭಿನ್ನ ಭಾವನೆಗಳು ಇಲ್ಲಿಲ್ಲ.
ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ.
ನಾವು ವಾಸಿಸುವ ಭೂಮಿ ಒಂದೇ.
ನಾವು ಉಸಿರಾಡುವ ವಾಯು ಒಂದೇ.
ನಾವು ಕುಡಿಯುವ ನೀರು ಒಂದೇ.
ನಾವು ವ್ಯವಹರಿಸುವ ನಗರ,ಪಟ್ಟಣಗಳು ಒಂದೇ,ನಮ್ಮ ದೇಶ ಒಂದೇ.
ನಮ್ಮ ರಾಜ್ಯ ಒಂದೇ.
ನಮ್ಮ ಗ್ರಾಮ ಒಂದೇ.
ಮತ್ತೆ ನಾವು ಭಿನ್ನರಾಗುವುದು ಎಲ್ಲಿ !?
ಅದು ಧರ್ಮ, ಸಂಸ್ಕೃತಿ,ನಂಬಿಕೆಯಲ್ಲಿ ಮಾತ್ರ.
ಅದು ಪ್ರಕೃತಿ ನಿಯಮ ಕೂಡ ಹೌದು.
ವಿವಿಧ ಧರ್ಮ, ಜಾತಿ,ಸಂಸ್ಕೃತಿ,ದೇಶ,ಭಾಷೆ,ವೇಷಭೂಷಣ ಎಲ್ಲವೂ ಭಾರತದ ವೈಶಿಷ್ಟ್ಯವಾದ ವಿವಿಧತೆಗಳಲ್ಲಿ ಏಕತೆಯ ಸಂಕೇತ.
ಇದು ನಮ್ಮನ್ನು ವಿಭಜಿಸದೆ ಒಟ್ಟಾಗಿಸಲಿರುವ ಸಂಸ್ಕೃತಿಗಳು ಮಾತ್ರ.
ಮಾನವ ಇತಿಹಾಸಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಜಗತ್ತಿನ ಮೊತ್ತ ಮೊದಲ ಮಾನವ, ಆದಿಪಿತ,ಪ್ರವಾದಿ ಅದಂ (ಅ) ಹಾಗೂ ಹವ್ವಾ ಬೀವಿ (ರ) ದಂಪತಿಗಳ ಮೂಲಕ ಜಗತ್ತಿನಲ್ಲೇ ಮೊತ್ತ ಮೊದಲು ನಮ್ಮ ಭವ್ಯ ಭಾರತ ದೇಶದಲ್ಲಿ ಆರಂಭವಾದ ಮನುಷ್ಯ ಜೀವನ, ಅದು ಭಾರತದಿಂದ ಜಗತ್ತಿನಾದ್ಯಂತ ವ್ಯಾಪಿಸಿ ಇಡೀ ವಿಶ್ವದಲ್ಲಿ ಒಂದೇ ತಂದೆ ತಾಯಿಯರ ಸಂತತಿಗಳು ವಿವಿಧ ಧರ್ಮ, ಜಾತಿ,ಪಂಗಡದವರಾಗಿ ಹರಡಿಕೊಂಡರು.
ಕರಿಯ,ಬಿಳಿಯ,ಧನಿಕ,ಬಡವ,ಪಂಡಿತ ಪಾಮರ ಹೀಗೆ ಯಾವುದೇ ತಡೆಗೋಡೆಗಳೂ ಮನುಷ್ಯರ ನಡುವೆ ಇಲ್ಲ.
ಆ ರೀತಿ ಇದ್ದರೆ ಅದು ಮಾನವೀಯತೆ ಇಲ್ಲದ ಕೆಲವರು ಸ್ವತಃ ನಿರ್ಮಿಸಿದ್ದು ಮಾತ್ರ.
ವಸ್ತುಸ್ಥಿತಿ ಹೀಗಿರುವಾಗ ಮೂಲತಃ ಒಂದೇ ತಂದೆ ತಾಯಿಯರ ಮಕ್ಕಳಾದ ನಾವೆಲ್ಲರೂ ಸಹೋದರ, ಸಹೋದರಿಯರಾಗಿದ್ದೇವೆ.
ಇಲ್ಲಿ ಅನ್ಯರು ಯಾರೂ ಇಲ್ಲ.
ಏಕೋದರ ಸಂಬಂಧದ ಶೃಂಖಲೆ ನಮ್ಮ ಪ್ರತಿಯೊಬ್ಬರ ಜೀವನದಲ್ಲೂ ಹಾಸು ಹೊಕ್ಕಾಗಿದೆ.
ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಹಾಜಿ ಯು.ಟಿ.ಅಬ್ದುಲ್ ಖಾದರ್ ಫರೀದ್ ಅವರು ಪವಿತ್ರ ಹಜ್ ಯಾತ್ರೆ ಕೈಗೊಂಡು ಊರಿಗೆ ಬಂದಾಗ ನಾಗರಿಕ ಸಮಾಜಕ್ಕೆ ಒಂದು ಪ್ರೀತಿಯ ಪತ್ರ ಬರೆದಿದ್ದು ಇದರಿಂದ ಪ್ರೇರಿತನಾಗಿ ನಾನು ಈ ಪತ್ರ ನಿಮಗಾಗಿ ಬರೆಯುತ್ತಿದ್ದೇನೆ.
ಈ ತನಕ ಕರಾವಳಿ ಪ್ರದೇಶದಲ್ಲಿ ಅಥವಾ ಕರ್ನಾಟಕ ರಾಜ್ಯದಲ್ಲಿ ನಡೆದ ಅಹಿತಕರ ಕಹಿ ಘಟನೆಗಳನ್ನು ಮರೆತು ಬಿಟ್ಟು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ನಡೆಸಿ ನಾಡಿನ ಮಾನವ ಸೌಹಾದರ್ತತೆಯನ್ನು ಹಚ್ಚ ಹಸಿರಾಗಿರುವಂತೆ ನೋಡಿಕೊಳ್ಳಲು ಇಂದೇ ಪಣ ತೊಡಬೇಕು.
ನಾವು ವಿವಿಧ ಪಕ್ಷ,ಸಂಘಟನೆ, ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಾಗಿರಬಹುದು.
ಅದು ನಮ್ಮ ದಿನನಿತ್ಯದ ವ್ಯವಹಾರ, ಬದುಕಿಗೆ ಯಾವತ್ತೂ ತೊಡಕು ಮತ್ತು ಸವಾಲಾಗಬಾರದು.
ಪ್ರತಿಯೊಬ್ಬರೂ ತಾವು ಅನುಸರಿಸುವ ಧರ್ಮ, ಸಂಸ್ಕೃತಿ,ಪಕ್ಷ,ಸಂಘಟನೆ, ಸಂಸ್ಥೆಗಳಲ್ಲಿ ಇರುವುದರ ಜತೆಗೆ ಇತರ ಭಾವನೆ,ನಂಬಿಕೆಗಳಿಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಪರಸ್ಪರ ಪ್ರೀತಿ, ವಿಶ್ವಾಸದ ಸಹಬಾಳ್ವೆ ನಡೆಸಿ ಇಡೀ ದೇಶ ನಮ್ಮತ್ತ ಕಣ್ಣತ್ತಿ ನೋಡಿ ಕೊಂಡಾಡುವಂತೆ ನಮ್ಮ ದಿನನಿತ್ಯದ ಬದುಕು ಸ್ಫಟಿಕ ಶುದ್ಧವಾಗಿ ಇರಬೇಕು.
ಆಗ ಮಾತ್ರ ಸ್ವತಂತ್ರ ಭಾರತ ತನ್ನ ನೈಜ ಗುರಿಯೆಡೆಗೆ ತಲುಪುತ್ತದೆ.
ಪತ್ರ ಸುದೀರ್ಘವಾದ ಕಾರಣ ಇಲ್ಲಿ ಗೆ ಮೊಟಕುಗೊಳಿಸಿ ನಿಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು
9449389112 ಗೆ ತಿಳಿಸಲು ಈ ಮೂಲಕ ಕೋರುತ್ತಿದ್ದೇನೆ.