ಅವನತಿಯತ್ತ ಆಮೆಗಳು
ಮಂಗಳೂರು:- ಅ.24 ಕರಾವಳಿ ಸವೆತ ಸಮುದ್ರ ಗೋಡೆಗಳ ನಿರ್ಮಾಣ ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಕರ್ನಾಟಕದ ಕರಾವಳಿಯ ಸಮುದ್ರ ಆಮೆಗಳ ಜೀವಿತಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಿವೆ ಎಂದು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ನಡೆಸಿದ ದೀರ್ಘಕಾಲೀನ ಅಧ್ಯಯನ ವರದಿ ಎಚ್ಚರಿಸಿದೆ.
2013 ರಿಂದ 2023 ರ ವರೆಗೆ ನಡೆದ ದಶಕದ ಸಂಶೋಧನೆ ಪ್ರಕಾರ ಬದಲಾಗುತ್ತಿರುವ ಸಮುದ್ರ ಪರಿಸರ ಮಾನವ ಅತಿಕ್ರಮಣ ಹಾಗೂ ಹವಾಮಾನ ಬದಲಾವಣೆಯ ಪರಿಣಾಮದಿಂದ ಆಮೆಗಳ ಗೂಡುಕಟ್ಟುವ ಸ್ಥಳಗಳು ವೇಗವಾಗಿ ನಾಶವಾಗುತ್ತಿವೆ.ಈ ಅವಧಿಯಲ್ಲಿ ಕರ್ನಾಟಕ ಕರಾವಳಿಯಲ್ಲಿನ ಆಮೇಗಳ ಸಂತಾನೋತ್ಪತ್ತಿ ಪ್ರಮಾಣವು ಗಂಭೀರವಾಗಿ ಕುಸಿದಿರುವುದು ವರದಿಯಿಂದ ಸ್ಪಷ್ಟವಾಗಿದೆ.
ಸಿಎಂಎಫ್ ಆರ್ ಐ ಮಂಗಳೂರಿನ ವಿಜ್ಞಾನಿ ಡಾ ಬಿಂದು ಸುಲೋಚನನ್ ಅವರ ನೇತೃತ್ವದಲ್ಲಿ ನಡೆದ ಈ ಸಂಶೋಧನೆ ಕ್ಷೇತ್ರ ಅಧ್ಯಯನಗಳು ಸಮುದ್ರ ಉತ್ಪಾದಕತೆಯ ಮೌಲ್ಯಮಾಪನಗಳು ನೀರಿನ ಗುಣಮಟ್ಟದ ಮೇಲ್ವಿಚಾರಣೆ ಹಡಗು ಸಂಚಾರದ ನಕ್ಷೆ ಹಾಗೂ ಸಾಂಪ್ರದಾಯಿಕ ಪರಿಸರ ಸಮೀಕ್ಷೆಗಳನ್ನು ಒಳಗೊಂಡಿತ್ತು.
2013 ರಿಂದ 2023 ರ ನಡುವೆ ಪಣಂಬೂರು, ಎರ್ಮಾಳ್, ಕಿರಿಮಂಜೇಶ್ವರ , ಮತ್ತು ಭಟ್ಕಳ ಸೇರಿದಂತೆ ಪ್ರಮುಖ ಕರಾವಳಿ ಪ್ರದೇಶಗಳಲ್ಲಿ ಸವೆತ ತಡೆಯಲು ಸಮುದ್ರ ಗೋಡೆಗಳನ್ನು ನಿರ್ಮಿಸಲ್ಪಟ್ಟಿದ್ದರೂ ಆ ಪ್ರದೇಶಗಳಲ್ಲಿ ಆಮೆಗಳು ಇದೀಗ ತಮ್ಮ ಉಳಿವಿಗಾಗಿ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸುತ್ತಿವೆ.
ಕೆಲವು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಆಮೆ ಮೊಟ್ಟೆ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರು ಬದುಕುಳಿಯುವಿಕೆಯ ಪ್ರಮಾಣ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ ಡಾ. ಬಿಂದು ಅವರ ವಿವರಣೆಯ ಪ್ರಕಾರ ಆಮೆಗಳು ಗೂಡುಕಟ್ಟಲು ಅಗಲವಾದ ಮರಳಿನ ಕಡಲತೀರಗಲನ್ನು ಬಯಸುತ್ತವೆ ಆದರೆ ಸಮುದ್ರ ಗೋಡೆಗಳು ಅವುಗಳ ಹಾದಿಗೆ ಅಡ್ಡಿಯಾಗುತ್ತವೆ ಇದರ ಪರಿಣಾಮವಾಗಿ ಆಮೆಗಳು ಸೂಕ್ತ ಗೂಡುಕಟ್ಟುವ ಸ್ಥಳಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ
ಹವಾಮಾನ ಬದಲಾವಣೆಯಿಂದ ಉಂಟಾದ ಸಮುದ್ರಮಟ್ಟ ಏರಿಕೆಯು ಅನೇಕ ಗೂಡುಕಟ್ಟುವ ಪ್ರದೇಶಗಳನ್ನು ಮುಳುಗಿಸಿದೆ ಇದರಿಂದ ಆಮೆಗಳ ಸಂತಾನೋತ್ಪತ್ತಿಗೆ ಮತ್ತೊಂದು ಅಡೆತಡೆ ಉಂಟಾಗಿದೆ 2012 ರಿಂದ 2023 ರ ನಡುವೆ ಕರ್ನಾಟಕ ಕರಾವಳಿಯಲ್ಲಿ 88 ಚಂಡಮಾರುತಗಳು ದಾಖಲಾಗಿದ್ದು ಕರಾವಳಿ ಸವೆತವನ್ನು ಹೆಚ್ಚಿಸಿವೆ ಮತ್ತು ಹಲವು ಆಮೆ ಗೂಡುಗಳು ಕೊಚ್ಚಿ ಹೋಗಿವೆ.
ಕರಾವಳಿ ಸವೆತ ಸಮುದ್ರ ಗೋಡೆಗಳು ಮತ್ತು ಹವಾಮಾನ ಬದಲಾವಣೆಯು ಕೇವಲ ಸಮುದ್ರ ಆಮೆಗಳಿಗೆಷ್ಟೇ ಅಲ್ಲ ಸಂಪೂರ್ಣ ಸಮುದ್ರ ಜೀವವೈವಿಧ್ಯ ಕರಾವಳಿ ಸಮುದಾಯಗಳಿಗೂ ಅಪಾಯವನ್ನುಂಟು ಮಾಡುತ್ತಿದೆ ಎಂದು ಡಾ. ಬಿಂದು ಸುಲೋಚನನ್ ಎಚ್ಚರಿಸಿದ್ದಾರೆ ಅವರು ಆಮೆ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅಗತ್ಯವಿದೆಯೆಂದು ಕರೆ ನೀಡಿದರು
ಅವರು ಮುಂದುವರೆದು ಮಾನವ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸಲು ಕರಾವಳಿ ಎಂಜಿನಿಯರಿಂಗ್ ಅಭ್ಯಾಸಗಳನ್ನು ನವೀಕರಿಸಬೇಕು ಇಲ್ಲದಿದ್ದರೆ ಮುಂದಿನ ದಶಕಗಳಲ್ಲಿ ಕರ್ನಾಟಕದ ಕಡಲ ತೀರಗಳು ಸಮುದ್ರ ಆಮೆಗಳ ಗೂಡುಕಟ್ಟುವ ಪ್ರದೇಶ ಸಂಪೂರ್ಣವಾಗಿ ಕಣ್ಮರೆಯಾಗುವ ಭೀತಿ ಇದೆ ಎಂದು ಹೇಳಿದರು
ಸಮುದ್ರ ಗೋಡೆಗಳ ಹಿಂದೆ ಮನುಷ್ಯರ ಸುರಕ್ಷತೆ ಇರಬಹುದು ಆದರೆ ಅದರ ಅಲೆಗಳ ಕೆಳಗೆ ಪ್ರಕೃತಿಯ ಶಾಶ್ವತ ಜೀವ ಚಕ್ರವು ನಿಧಾನವಾಗಿ ನಿಶಬ್ದವಾಗುತ್ತಿದೆ



